Monday 25 November 2013

(ನೀನಿರದ  ಬಾಳೇಕೆ..? ಕಥೆಯ ಮೊದಲನೆಯ ಭಾಗವನ್ನು ನಾನಿಂದು ನಿಮ್ಮ ಮುಂದಿಡುತ್ತಿದ್ದೇನೆ ..
"ನೀನೆಲ್ಲೋ... ನಾನಲ್ಲೆ" ಎಂದು ಮೊದಲು ಶೀರ್ಷಿಕೆ ಇಡಲಾಗಿತ್ತು .. ಕಾರಣಾಂತರ ಗಳಿಂದ ಬದಲಿಸಿದ ಶೀರ್ಷಿಕೆಯೊಂದಿಗೆ  ನೀನಿರದ ಬಾಳೇಕೆ..? ಕತೆಯ ಮೊದಲ ಭಾಗ.. . ಓದಿ, ಆನಂದಿಸಿ ,ಇಷ್ಟವಾದರೆ  ಅಭಿನಂದಿಸಿ )

ನೀನಿರದ  ಬಾಳೇಕೆ..? 
============

ಅಯ್ಯೋ ಪಾಪ ಇನ್ನು ಚಿಕ್ಕ ವಯಸ್ಸು ಕಣೋ, ದೇವ್ರು  ಇಂತ ಅನ್ಯಾಯ ಮಾಡಬಾರದಿತ್ತು  ಸರ್ಸಿ ,

ಚೆನ್ನಾಗ್ ಹೇಳ್ದೆ ನರಸಕ್ಕ ಆ ದೇವರಿಗೆ ಕಣ್ಣ ಎಲ್ಲದೆ , ಯಾರು ಒಳ್ಳೇವ್ರು ಯಾರ್ ಕೆಟ್ಟವರು ,, ಯಾವ್ದು  ನ್ಯಾಯ ಯಾವ್ದು ಅನ್ಯಾಯ ಅಂತ ತೀರ್ಮಾನ ಮಾಡೋ ಹಂಗೆ ಇದ್ದಿದ್ರೆ , ಇವತ್ತ ಯಾಕೆ ಚಿನ್ನದಂತ ಈ ಹುಡ್ಗ ಇಂಗೆ ಮಲ್ಕ ಬೇಕಿತ್ತು ,, ಅವನೆಲ್ಲೋ ಕಣ್ಣಿಗೆ ಬಟ್ಟೆ  ಕಟ್ಕೊಂಡ್ ಕುಂತ್   ಬಿಟ್ಟವ್ನೆ ... ಈ ಗೊಳ್ನ ನನ್ನ ಕಣ್ಣಿಂದ ನೋಡಕ್ಕೆ ಆಗ್ತಿಲ್ಲ ನರಸಕ್ಕ ,,,,,ಆ  ನಿಮ್ ದೇವ್ರು ಇಷ್ಟೊಂದ್   ಕ್ರೂರಿ ಆಗ್ಬಾರ್ದಿತ್ತು   ...


(ಹೀಗೆ ಅಲ್ಲಿ ನೆರೆದಿದ್ದ ಜನರ ಮದ್ಯೆ ಭಾವುಕರಾದ ಇಬ್ಬರು ಹೆಂಗಸರು  ಮಾತನಾಡಿಕೊಳ್ಳುತ್ತಿದ್ದರು)

ಸುತ್ತ ನೆರೆದಿದ್ದ ಜನರೆಲ್ಲರೂ ಈ ದೃಶ್ಯವನ್ನು ನೋಡಲಾರದೆ ದೇವರನ್ನು ಶಪಿಸುತ್ತಿದ್ದರು
ಇನ್ನು ಸಂಬಂಧಿಕರ ಅಳಲು ಅಲ್ಲಿ ನೆರೆದಿದ್ದವರ ಜನರಲ್ಲೂ ಕಣ್ಣೀರು ತರಿಸುವಂತೆ ಮಾಡಿತ್ತು .
ಇವರೆಲ್ಲರ ಮದ್ಯೆ ಮಲಗಿದ್ದ ಶವ  ಮಾತ್ರ   ಚಿಂತೆಯಿಲ್ಲದೆ ನಗುತ್ತಿತ್ತು, ನೆರೆದಿದ್ದವರ ಅಳಿಸುತ್ತಿತ್ತು .
ಅಂದು ಊರಿಗೆ ಊರೇ  ಮಂಕಾಗಿತ್ತು !!


ಹೆಣದ ಹಿಂಭಾಗದಲ್ಲಿ ಒಂದು ಚೇರ್ ಹಾಕಿಕೊಂಡು ವಯಸ್ಸಾದ ಮುದುಕರೊಬ್ಬರು ತಲೆಮೇಲೆ ಕೈ ಇಟ್ಟುಕೊಂಡು ಏನೋ ಕಳೆದುಕೊಂಡತೆ  ದುಃಖತಪ್ತರಾಗಿ ಕುಳಿತ್ತಿದ್ದರು .

ಅವರ ಕಿವಿಗೆ 'ಮಾವ ‘ ಮಾವ ' ಎಂದು ಕೂಗುತ್ತಿರುವ ಒಂದು ಹೆಣ್ಣಿನ ಧ್ವನಿ ಕೇಳಿಸುತ್ತದೆ
ಅವರು ತಲೆಯೆತ್ತಿ

ಏನಮ್ಮಾ  ಸ್ವಾತಿ  (ಅಳುವ ಧ್ವನಿಯಲ್ಲಿ ಕೇಳುತ್ತಾರೆ)

ಸ್ವಲ್ಪ ಒಳಗಡೆ ಬನ್ನಿ ಮಾವ ಒಂದು ವಿಚಾರ ಮಾತಾಡಬೇಕಿತ್ತು .

ಈಗ  ಎಂತ ವಿಚಾರನಮ್ಮ ಮಾತಾಡೋದು
ನನ್ನ ಮಗ ಎಲ್ಲಾ ಮರೆತು ಕಣ್ಣ ಮುಚ್ಕೊಂಡ್ ಬಿಟ್ಟವ್ನೆ , ನಮ್ನೆಲ್ಲಾ ತಬ್ಬಲಿ ಮಾಡ್ ಬಿಟ್ಟ್  ಹಾಯಗ್ ಮಲ್ಕ ಬಿಟ್ಟವ್ನೆ
ಮೊದ್ಲು ಅವನ ಸಂಸ್ಕಾರ ಎಲ್ಲಾ ಮುಗೀಲಿ ಆಮೇಲೆ ಅದೇನ್ ಮಾತಾಡುವಂತೆ..  (ಎಂದು ನಿಧಾನವಾಗಿ ಅಳುತ್ತಾ ಅಳುತ್ತಾ  ಹೇಳುತ್ತಾರೆ )

ಎಲ್ಲಾ ಆದ್ಮೇಲೆ ಆ ವಿಷ್ಯ ಮಾತಾಡಿ ಪ್ರಯೋಜನ ಇಲ್ಲ ಮಾವ . ಇದು ಅದಕ್ಕಿಂತ  ಮುಂಚೆನೇ ತೀರ್ಮಾನ ತೆಗೆದುಕೊಳ್ಳುವಂತ ವಿಷ್ಯ


ನಿನ್ನದೊಳ್ಳೆ  ಕಥೆ ಆಯ್ತಲ್ಲ , ನಿನ್ನ ಗಂಡನಿಗಿಂತ ನಿನ್ನ ಮಾತೆ ಮುಖ್ಯ ಆಗೋಯ್ತಲ್ಲ ನಿಂಗೆ ...
(ಮಗನ ಸಾವಿನಿಂದ ನೊಂದಿದ್ದ ಗೌಡರಿಗೆ  ಇವಳ ಮಾತನ್ನು ಕೇಳುವ ಸಹನೆ ಇರುವುದಿಲ್ಲ
ಅದಕ್ಕೆ ಸ್ವಲ್ಪ ಅವಳ ಮೇಲೆ ರೇಗಾಡುತ್ತಾರೆ )

ನನಗೆ ನನ್ನ ಗಂಡನೇ ಮುಖ್ಯ ಆಗಿರೋದಕ್ಕೆ ಮಾವ ಈ ಮಾತು ಪ್ಲೀಸ್ ಒಳಗೆ  ಬನ್ನಿ.

ಏನೋ ನಿನ್ನ ಮಾತೆ ಅರ್ಥವಾಗಲ್ಲ ನಂಗೆ ...ಸರಿ ನಡಿ

ಇಬ್ಬರು ಮನೆಯ ಒಳಗಡೆ ಹೋಗುತ್ತಾರೆ....


ನಿನ್ನ ಕಷ್ಟ ನನಗೆ ಅರ್ಥ ಆಯ್ತದೆಮಗಳೇ . " ನಮ್ಮ ಕೈಲಿ ಏನದೆ  ಹೇಳು .
ಆ ದೇವ್ರ್ಗೆ ನೀನು ನಿನ್ನ ಗಂಡನ ಜೊತೆ ಬಾಳೋದು ಇಷ್ಟ ಇಲ್ಲ ಅಂತ ಕಾಣ್ತದೆ ,,, ಪಾಪಿ ನಮಗೆಲ್ಲಾ ವಿಷ ಉಣ್ಸ್ ಬಿಟ್ಟ. :(

ಮಾವ ...........

ಹ  ಅದೇನ್ ಹೇಳಮ್ಮ ,, ಅದೇನೋ ಹೇಳಬೇಕಂದಲ್ಲ ….

ಇವಳು ಬಿಕ್ಕಿ ಬಿಕ್ಕಿ ಅಳ ತೊಡಗುತ್ತಾಳೆ ...........

ಇದೇನಮ್ಮ ಸ್ವಾತಿ ನೀನೆ  ಹಿಂಗೆ ಅಳ್ತಾ ನಿಂತ್ಕೊಂಡ್ ಬಿಟ್ರೆ .. ನಮಗೆಲ್ಲ ಧೈರ್ಯ ಹೇಳೋರ್ಯಾರು  ... ಇದ್ದ ಒಬ್ಬ ಮಗನಂತೂ ನಮ್ಮನ್ನೆಲ್ಲಾ ಬಿಟ್ಟು ಹೊರಟೋದ   ಇನ್ನು ಈ ಮನೆಗೆ ನಮಗೆ ನೀನೆ ಆಧಾರ ಕಣಮ್ಮ
ಬಾ ಬಾ ಅಳೊದ್ರಿನ್ದ    ಕೆಲಸ ಆಗಲ್ಲ  .. ಇನ್ನು ಬೇಜಾನ್ ಕೆಲಸ ಬಿದ್ದದೆ ಬಾ  ಅದೇನ್ ಆಮೇಲೆ ಹೇಳುವಂತೆ ಮೊದ್ಲು  ಸಂಸ್ಕಾರ ಆಗ್ಬೇಕು ...

(ಎಂದು ಹೇಳುತ್ತಾ ಹೊರಗಡೆ ಹೋಗುತ್ತಿರುತ್ತಾರೆ ರುದ್ರೆಗೌಡರು)

ಮಾವ ಒಂದು ನಿಮಿಷ
 ………

ಅವರಿಲ್ಲದೆ ನನ್ನಿಂದ ಒಂದು ದಿನ ಕೂಡ ಕಳೆಯೋಗೆ ಆಗಲ್ಲ ಮಾವ
ಅವರಿಲ್ಲದ ಈ  ಜೀವನ ನನಗೆ ಬೇಡ .. ನನ್ನ  ಪ್ರಾಣನು ಅವರ ಜೊತೇನೆ ಬೆರೆತೋಗಿದೆ ಇನ್ನು ಈ ದೇಹಕೇವಲ ಶೂನ್ಯ,
ಯಾವ ಕೆಲಸಕ್ಕೂ ಬರಲ್ಲ .. ಅದ್ಕೆ   ನಾನೊಂದು ತೀರ್ಮಾನಕ್ಕೆ ಬಂದಿದೀನಿ ಮಾವ   
ಹೇಗಿದ್ರು ಈ ಜೀವ ಅರ್ಧ ಸತ್ತು ಹೋಗಿದೆ .. ಇನ್ನು ಉಳಿದಿರೋ ಅರ್ಧ ಜೀವ ಇಟ್ಕೊಂಡ್ ಕೊರಗಿ ಕೊರಗಿ ಹೋಗೋ ಬದಲು ಪೂರ್ತಿಯಾಗಿ ಇಂದೇ  ಅವ್ರ ಜೊತೇನೆ ಮಣ್ಣಾಗಿ  ಹೋಗ್ಲಿ ಅನ್ನೋದು  ನನ್ನ ಆಸೆ!

ನಿಲ್ಸಮ್ಮ  ನಿಲ್ಸು ಸಾಕು ಸಾಕು,,,,, ಮುಂದೇನು ಹೇಳಬೇಡ.

ಏನ್ ಮಾತಾಡ್ತಾ ಇದ್ದೀಯ ಅಂತ ಪ್ರಜ್ಞೆ ಇದೆಯೇನಮ್ಮ   ನಿಂಗೆ ..  ಗಂಡ  ಸತ್ತಿರೋ  ನೋವು ನಿನ್ನ ಇಂಗೆಲ್ಲ ಮಾತನಾಡಿಸ್ತ   ಇದೆ ನಿನ್ನ ..  ನಮಗೂ ನೋವಿದೆ ಸತ್ತಿರೋದು ನನ್ನ ಮಗ... ಹಾಗಂತ ನಾನು ಅವನ ಜೊತೆನೆ ಸಾಯಬೇಕು ಅನ್ಕೊಳೋದು  ಸರೀನಾ ....   ನಿನ್ನ ಬಗ್ಗೆ ನನಗೂ ಕನಿಕರ ಇದೆ…..
ಹೋದೊನ್  ಹೋದ ಹಾಗಂತ ನೀನು ಜೀವನ ಎಲ್ಲ ಕೊರಗ್ತಾ ಕೂತ್ಕೋ ಈ ಮನೇಲೆ ಇರು ಅಂತ ಆಗ್ಲಿ ಅಥವಾ ಇನ್ನು ನಿಂಗು ಈ ಮನೆಗೂ  ಋಣ ಮುಗೀತು ನಿಮ್ಮಪ್ಪನ  ಮನೆಗೆ ಹೋಗು ಅಂತ ಆಗ್ಲಿ ಹೇಳೋ ನೀಚ ಅಲ್ಲಮ್ಮ ನಾನು ..
ನೀನಿನ್ನೂ ಬಾಳಿ ಬದುಕ ಬೇಕಾಗಿರೋ ಹೆಣ್ಣು ಮಗಳು ...
ನೀನ್  ಇನ್ನೊಂದ್ ಮದ್ವೆ ಮಾಡ್ಕೋ ಈ ಆಸ್ತಿಪಾಸ್ತಿ ಎಲ್ಲ ನಿಂದೆ ಹಾಯಾಗಿ ಸಂಸಾರ ಮಾಡ್ಕೊಂಡು ಹೋಗು .. ನಾನು ನನ್ನ ಹೆಂಡ್ತಿ ಇವತ್ತೋ ನಾಳೆನೋ ಸಾಯೊ ಜೀವಗಳು ಕಾಶಿಗೋ  ರಾಮೇಶ್ವರ ಕ್ಕೊ ಹೋರಟೋಗ್ತೀವಿ   ...

ನನ್ನ ಜೀವನ ಇಲ್ಲಿಗೆ ಮುಗೀತು ಇನ್ನ ನನಗೆ ಯಾರು ದಿಕ್ಕು ಅಂತ ಈ ರೀತಿಯೇಲ್ಲೇ ಕೆಟ್ಟ ಕೆಟ್ಟ ಯೋಚನೆ ಮಾಡೋದನ್ನ ಬಿಟ್ಟು ... ಮುಂದಿಂದ ಬಾಳು ಕಟ್ಟಿಕೊಳ್ಳೋದ  ನೋಡು.
ನೀನು ವಿದ್ಯಾವಂತೆ ಓದಿರೋಳು  ನಿಂಗೆ  ಹೆಚ್ಚಿಗೆ  ನಾನೇನು ಹೇಳಬೇಕಿಲ್ಲ ...
ಹುಚ್ಚು ಹುಡುಗಿ ಎಂತ ನಿರ್ಧಾರ ಮಾಡಿದೀಯ ನೋಡು ..!


ಇಲ್ಲ ಮಾವ ನಾನು ಚೆನ್ನಾಗಿ ಯೋಚನೆ ಮಾಡಿನೆ  ಈ ನಿರ್ಧಾರ ತಗೊಂಡಿರೋದು  .. ನನ್ನ ನಿರ್ಧಾರ ಸರಿಯಾಗಿಯೇ ಇದೆ
ನಾನು ಇನ್ನೊಂದ್ ಮದ್ವೆ ಆಗೋದ್ರಿಂದ ನನ್ನಿಂದ ಇನ್ನೊಬ್ಬನ ಜೀವನ ಹಾಳಾಗುತ್ತೆ ಹೊರತು ಯಾರಿಗೂ ಸುಖ ಇಲ್ಲ
ಅಂತಹ  ಜೀವನ ನನಗೆ ಬೇಕಾಗೂ ಇಲ್ಲ
ನಾನು ನಿರ್ಧಾರ ಮಾಡಿ ಬಿಟ್ಟಿದೀನಿ  ಮಾವ ,,,, ನಾನೂ ಅವರ ಜೊತೇಲೆ ಬೂದಿಯಾಗಬೇಕು!
ನಾನು ಅವರ ಸುತ್ತ ಬೂದಿಯಲ್ಲೂ ಒಂದಾಗಬೇಕು ! ……

ಏನಮ್ಮ ಮಾತಾಡ್ತಾ ಇದ್ದೀಯ .. ತಲೆಗಿಲೆ ಕೆಟ್ಟಿದ್ಯಾ ನಿಂಗೆ ... ಮುಂದೆ ಏನ್ ಮಾಡಬೇಕು ಅಂತ ಅಂದುಕೊಂಡಿದೀಯ 


ಅವರ ಚಿತೆಯಲ್ಲಿ ಹಾರಿ .. ಅವರಿಲ್ಲದ ಈ ಜೀವನಕ್ಕೆ ನಾಂದಿ ಹಾಡ ಬೇಕೆಂದಿದೇನೆ  ಮಾವ.........!
ಅವರನ್ನು ಸುಡುವ ಆ  ಕಟ್ಟಿಗೆ ಗಳಿಂದಲೇ ನಾನೂ ಬೇಯಬೇಕೆನ್ದಿದೇನೆ .. ನಾನೂ ಅವರೊಂದಿಗೆ ಸದಾ ಒಂದಾಗೆ ಇರ್ಬೇಕು ಮಾವ... ಅವರು ಒಬ್ರೇ ಹೋಗಕ್ಕೆ ನಾನ್ ಬಿಡಲ್ಲ ...  !!

ಅವಳ   ಮಾತುಗಳನ್ನು ಕೇಳುತ್ತಿದ್ದಂತೆಯೇ ಗೌಡರ ಎದೆ ಬಡಿತ ಜಾಸ್ತಿಯಾಗುತ್ತದೆ
ಮುಂದೆ ಏನು ಮಾತಾ ನಾಡಬೇಕು ಎಂಬುದೇ ತೋಚುವುದಿಲ್ಲ !


ಮೆಲ್ಲಗೆ ಮುಗುಳ್ನಕ್ಕು ಮುಂದುವರೆಯುತ್ತಾರೆ

ಚೆನ್ನಾಗಿ ಹಾಸ್ಯ ಮಾಡ್ತೀಯ ಕಣಮ್ಮ
ಎಂತ ಹುಚ್ಚು ಆಸೆನಮ್ಮ ನಿಂದು ಏನ್ ಇತಿಹಾಸ ಸೃಷ್ಟಿಸಬೇಕು ಅಂತ ಮಾಡಿದೀಯೋ
ನೀನ್ ಅದ್ರಲ್ಲಿ ಹಾರಿ ನಮ್ನೆಲ್ಲಾ ಜೈಲಿಗೆ ಕಳಿಸಬೇಕು  ಅನ್ನೊದ ನಿನ್ನ ಆಸೆ.
"ಸತಿ ಸಹಗಮನ"  ಮಾಡ್ಬೇಕು ಅಂತ ಅನ್ಕೊಂಡಿದ್ದೀಯೇನಮ್ಮ
ಈ ರುದ್ರೆಗೌಡನ ಎಲ್ರೂ ನೋಡಿ ನಗಬೇಕು ಅನ್ನೊದ ನಿನ್ನ ತೀರ್ಮಾನ.?
ಚೆನ್ನಾಗಿದೆ ಕಣಮ್ಮ ಚೆನ್ನಾಗಿದೆ..



  (ಇವರ ಮಾತುಗಳನ್ನ ಬಾಗಿಲಲ್ಲೇ ನಿಂತು ಕೇಳಿಸಿಕೊಳ್ಳುತ್ತಿದ್ದ ಗೌಡರ ಹೆಂಡತಿ ಚಂದ್ರಮ್ಮ
ದಡಾರನೆ  ಒಳಗೆ ನುಗ್ಗಿ ಬಂದವಳೇ (ಕೋಪದಿಂದ )

ಹಾಸ್ಯ ಮಾಡದೆ ಇನ್ನೇನ್ ಮಾಡ್ತಾಳೆ
ಆಡ್ಕ್ಕೊಳೊರ್   ಬಾಯಿಗೆ ನಮ್ನೆಲ್ಲ ಒಸಕಿ ಹಾಕಿ ಹೋಗ ಬಿಡ್ಬೇಕ್  ಅನ್ಕೊಂ ಡಿದ್ದ ಳೇನೋ
ಏನ್ ದೊಡ್ಡ ಪತಿವ್ರತೆ ಇವಳು
ಚಿತೆಗೆ ಹಾರಿ ದೊಡ್ಡ  ಹೆಸರು ಮಾಡಬೇಕೇನೋ
ನೋಡಿದ ಇವ್ಳ್ನಾ    ,, ಎಲ್ಲಿತನಕ ಬಂದ್ ಬಿಟ್ಳು ….
ಬೆಂಕಿಗೆ ಹರ್ತಾಳಂತೆ ಬೆಂಕಿಗೆ .......

(ಚಂದ್ರಮ್ಮನ  ಕಿರುಚಾಟ ಕೇಳಿಸಿಕೊಂಡ ಸ್ವಾತಿ ತಂದೆ ತಾಯಂದಿರು ಏನಾಯ್ತೋ ಏನೋ ಅಂತ ಗಾಬರಿಯಿನ್ದ  ಒಳಗೆ ಬರುತ್ತಾರೆ  )

ಅದನ್ನು ಗಮನಿಸಿದ ಗೌಡರು ....

ಅಗೋ ನಿಮ್ಮ ಅಪ್ಪ ಅಮ್ಮನೇ ಬಂದ್ರು
ನನ್ನ  ಗಂಡ ಸತ್ತಿದ್ದಾನೆ ನಾನು ಸಾಯ್ತೀನಿ ಅಂತ ಹೇಳಿದ್ರೆ ನಿಂಗೆ ಆಶೀರ್ವಾದ ಮಾಡಿ ಕಳಿಸಿಕೊಡೋಕೆ
ನನಗೆ ಅಧಿಕಾರ ಇಲ್ಲ . ನಿನ್ನ ಹೆತ್ತು ಹೊತ್ತು ಸಾಕಿ ಬೆಳೆಸಿದ ನಿಮ್ಮ ಅಪ್ಪ ಅಮ್ಮನಿಗೆನಾದ್ರು ಆ ಅಧಿಕಾರ  ಇದ್ರೆ 
ನೀನು ಅವರ ಹತ್ತಿರಾನೆ ಕೇಳಿ ಪಡ್ಕೋ ... ಏನ್ ಬೇಕಾದ್ರೂ ಮಾಡ್ಕೋ .


ಏನಮ್ಮಾ ಇದೆಲ್ಲಾ  ( ಸ್ವಾತಿಯ ತಂದೆ ನಿಧಾನವಾಗಿ ಕೇಳುತ್ತಾರೆ )

ರುದ್ರೇ ಗೌಡರು ನಡೆದ ವಿಷಯವನ್ನೆಲ್ಲಾ ಸ್ವಾತಿಯ ತಂದೆಗೆ ವಿವರಿಸುತ್ತಾರೆ

ವಿಷಯ ತಿಳಿಯುತ್ತಿದ್ದ ಹಾಗೆ ಸ್ವಾತಿಯ ತಾಯಿ ಗೊಳೋ  ಅಂತ ಅಳುತ್ತಾ
ಮಗಳ ಕೆನ್ನೆ ಹಿಡಿದು

ಏನ್ ಬಂತೆ ನಿನ್ನ ಬುದ್ದಿಗೆ ,, ನಿನ್ನ ಗಂಡ ಸತ್ತ ಮಾತ್ರಕ್ಕೆ  ನಾವು
ಸತ್ತು ಹೋಗಿದ್ದೀವೇನೆ ... ಅಯ್ಯಯ್ಯೋ ನನ್  ಮಗಳಿಗೆ ಯಾರೋ ಮಾಟ  ಮಾಡಿಸಿ ಬಿಟ್ಟವ್ರೆ ಕಣಪ್ಪೋ ಇಲ್ಲ ಅಂದ್ರೆ ಇವ್ಳು ಇಂಗೆಲ್ಲ ಮಾತಾಡಕ್ಕಿಲ್ಲ ... ಅಯ್ಯಯ್ಯೋ ಅಂತ ಅಳುತ್ತಾ ರಾಗ ಎಳೆಯುತ್ತಿರುತ್ತಾರೆ .

ಆಗ ಸ್ವಾತಿಯ ತಂದೆ
ನೀನ್ ಸ್ವಲ್ಪ ಸುಮ್ನೆ ಇರ್ತೀಯ ... ಹೀಗೆ ಜೋರಾಗಿ ಕಿರ್ಚ್ಕೊಂಡ್ ಊರೋರ್ ಗೆಲ್ಲ ಗೊತ್ತಗಬೇಕೆನು  ..
ಸುಮ್ನೆ ನಿಂತ್ಕೋ .. ಎಂದು ತನ್ನ ಹೆಂಡತಿಗೆ ಗದರುತ್ತಾರೆ ...


ನಂತರ ಸ್ವಾತಿಯ ಕಡೆ ತಿರುಗಿ
ಆಗೇ 5 ನಿಮಿಷ ಅವಳನ್ನು ನೋಡಿ ..
ನೀನು ನಿನ್ನ ಗಂಡನ ಎಷ್ಟು ಪ್ರೀತಿಸ್ತ  ಇದ್ದೆ   ಅನ್ನೋದು ನಮಗೆಲ್ಲಾ ಗೊತ್ತು ಸ್ವಾತಿ
 ನೀವಿಬ್ರು ಎಷ್ಟ್ ಅನ್ಯೋನ್ಯವಾಗಿ ಸಂಸಾರ ಮಾಡ್ತಾ ಇದರಿ ಅನ್ನೋದು ಈ ಊರಿಗೆ ಗೊತ್ತು ..
ಏನೋ ನಮ್ಮ  ದೌರ್ಭಾಗ್ಯ ಆ ಸೌಭಾಗ್ಯನ ಇನ್ನು ನೋಡೋ ಭಾಗ್ಯನ ಆ  ದೇವ್ರು ಕೊಡಲಿಲ್ಲ .. ಹಾಗಂತ ನೀನು ಇಂತ ನಿರ್ಧಾರನ  ಮಾಡೋದು ,,, ಈಗೆಲ್ಲ ಮಾತಾಡಿ ನಮ್ಮ ಕರಳು ಕಿವುಚಬೇಡ ಕಣಮ್ಮ .

ನಿಮ್ಮಪ್ಪ ಇನ್ನು ಬದುಕಿ ದ್ದೀನಮ್ಮ  ನಿಂಗೆ ಯಾವ್ದ್ರಲ್ಲೂ ಕಡಿಮೆ ಇಲ್ಲದ ಹಾಗೆ ನಾನು ನೋಡಿ ಕೊಳ್ತೀನಿ ..
ಗಂಡ ಸತ್ತಿದ್ದಾನೆ ಅಂತ ಇವತ್ತು  ನೀನು ಇಂಗೆಲ್ಲ ಮಾತಾಡ್ತಾ ಇದ್ದಿ... ಸ್ವಲ್ಪ ದಿನ ಕಳೀಲಿ. ನೀನೆ ಸರಿ ಹೋಯ್ತೀಯ ...
ಬಾ ಬಾ ಮುಂದಿನ ಕಾರ್ಯ ನೋಡುವ ಬಾ !

ಇಲ್ಲ……
ಇಲ್ಲ……!

ನನಗೆ ಅವರು ಬೇಕು .. ಅವರ ಪ್ರೀತಿ ಬೇಕು!
ಅವರು ಯಾವಾಗ್ಲೂ ನನ್ನ ಜೊತೇನೆ ಇರ್ಬೇಕು !
ತಂದು  ಕೊಡ್ತೀಯ ಅಪ್ಪ . ನನಗೆ ಅವರು ಬೇಕು ತಂದು  ಕೊಡ್ತೀಯ (ಗಟ್ಟಿಯಾಗಿ ಕೇಳುತ್ತಾಳೆ )

ಎಲ್ಲರು ಒಂದು ಕ್ಷಣ ಸ್ಥಬ್ದ ರಾಗಿ ನಿಂತು ಬಿಡುತ್ತಾರೆ.

ಮಗಳ ಸ್ಥಿತಿಯನ್ನು ನೋಡಿ , ಕಣ್ಣೀರು ಸುರಿಸಿ ಅವಳ ಮಾತುಗಳನ್ನು ಕೇಳಿ ಭಯಗೊಂಡ
ಸ್ವಾತಿಯ ಅಮ್ಮ......

ನಿನಗೆನಾದ್ರು ಹುಚ್ಚು ಗಿಚ್ಚು ಹಿಡಿದಿದ್ದೀಯೇನೆ …
ಯಾಕೆ ಹಿಂಗೆಲ್ಲ ಮಾತಾಡಿ ನಮ್ಮ ಹೊಟ್ಟೆ ಹುರಿಸ್ತೀಯ
ನಮಗೆ ಒಂಚೂರು ವಿಷ ಕೊಟ್ಟುಬಿಡು ಆಮೇಲೆ ನೀನ್ ಏನ್ ಬೇಕಾದ್ರೂ ಮಾಡ್ಕೋ
ಏನ್ ಬೇಕಾದ್ರೂ ಮಾಡ್ಕೋ ..................

ಎಂದು ಹೇಳುತ್ತಾ ಮಗಳನ್ನು ಹಿಡಿದುಕೊಂಡು ಕೆಳಗೆ ಕುಸಿದು  ಬೀಳುತ್ತಾರೆ ...

ಯಾರು ಏನೇ ಹೇಳಿದರು ಸ್ವಾತಿಯ ಮನಸ್ಸು ಮಾತ್ರ …….

ಜೀವವು ನೀನೆ ಜೀವನ ನೀನೆ
ಬರುವೆನು ನಾನು ನಿನ್ನೊಡನೆ
ದೈವವು  ನೀನೆ ಪ್ರೇಮವು  ನೀನೆ
ನೀನಿರದ ಬದುಕು ಬೇಡನೆಗೆ 

ಹೋಗಲಿ ಇಂದೇ ನನ್ನಯ ಪ್ರಾಣ
ಸೇರಲಿ ನಿನ್ನ ಜೊತೆಯಲ್ಲಿ
ಬೆಸೆಯಲಿ ಬಂಧ  ಜನುಮ ಜನುಮಕು
ನಿನ್ನಲಿ ನನ್ನ ನನ್ನಲಿ ನಿನ್ನ

ಎಂದು ಕನವರಿಸುತ್ತಿರುತ್ತದೆ………!


ಮುಂದೇನು ... ಸತ್ತಿರೋನು ಯಾರು? ಏನಾಯ್ತು ???? ಎಲ್ಲ ಈ ಪ್ರಶ್ನೆಗಳಿಗೂ ಉತ್ತರ

ಮುಂದುವರೆಯುವುದು.....
ಧನ್ಯವಾದ
ಸೋಮೇಶ್ ಎನ್  ಗೌಡ